ರಾಜಕೀಯ ದುರುದ್ದೇಶದಿಂದ ಪ್ರಿಯಾ ಗಾರ್ಮೆಂಟ್ಸ್ ವಿರುದ್ದ ಅಪಪ್ರಚಾರ-ಪಾಲನೇತ್ರಾಯ್ಯ

ತುಮಕೂರು-ಗ್ರಾಮೀಣ ಮಹಿಳೆಯರಿಗೆ ಮನೆ ಬಾಗಿಲಿನಲ್ಲಿ ಉದ್ಯೋಗ ಒದಗಿಸಿ,ಅವರ ಅರ್ಥಿಕ ಸ್ವಾವಲಂಬನೆಗೆ ದಾರಿಯಾಗಿರುವ ಪ್ರಿಯಾ ಗಾರ್ಮೆಂಟ್ಸ್ ಬಗ್ಗೆ ಕೆಲವರು ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು,ಕೆಟ್ಟ ಹೆಸರು ತರುವ ಪ್ರಯತ್ನ ನಡೆಸಿದ್ದಾರೆ ಎಂದು ಪ್ರಿಯಾ ಗಾರ್ಮೇಂಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಗೂಳೂರು ಹೋಬಳಿ ಕಾಂಗ್ರೆಸ್ ಮುಖಂಡ ಪಾಲನೇತ್ರಯ್ಯ ತಿಳಿಸಿದ್ದಾರೆ.

ತಮ್ಮ ಗಾರ್ಮೇಂಟ್ಸ್ ಬಗ್ಗೆ ಇತ್ತೀಚಗೆ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಸ್ಪಷ್ಟನೇ ನೀಡಿದ ಅವರು, ನಾನು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ. ಬಡ ಕುಟುಂಬದಲ್ಲಿಯೇ ಹುಟ್ಟಿ, ಮಠದ ಓದಿ, ಶ್ರೀಗಳ ಆಶೀರ್ವಾದಿಂದ ವ್ಯಾಪಾರ ವ್ಯವಹಾರ ನಡೆಸುತ್ತಿದ್ದು, ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗಕ್ಕಾಗಿ ಬೆಂಗಳೂರಿನಂತಹ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಸಲುವಾಗಿ ತಲಾ 200 ಜನರಂತೆ ಮೂರು ಪಾಳಿಯಲ್ಲಿ ಕೆಲಸ ಮಾಡಬಹುದಾದ ಪ್ರಿಯಾ ಗಾರ್ಮೆಂಟ್ಸ್ ತೆರೆದು, ಕಳೆದ ಒಂದುವರೆ ವರ್ಷದಿಂದ ಕಾರ್ಯನಿರ್ವಹಿಸುತಿದ್ದೇವೆ ಎಂದರು.
ವ್ಯಾಪಾರ, ವ್ಯವಹಾರ ಎಂದಾಗ ಲಾಭ, ನಷ್ಟ ಸಾಮಾನ್ಯ.ಇದನ್ನೇ ಕೆಲವರು ನೆಪ ಮಾಡಿಕೊಂಡು ನಮ್ಮಲ್ಲಿ ಕೆಲಸ ಮಾಡುತಿದ್ದು, ಕೆಲಸ ತೊರೆದ ಮಾಜಿ ಕಾರ್ಮಿಕರನ್ನೇ ಉಪಯೋಗಿಸಿಕೊಂಡು ವೇತನ ನೀಡಿಲ್ಲ.ಪಿ.ಎಫ್ ಕಟ್ಟಿಲ್ಲ ಇನ್ನಿತರ ಆರೋಪಗಳನ್ನು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಸುವ ಮೂಲಕ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.
ನನ್ನ ವಿರುದ್ದ ಷಡ್ಯಂತ್ರ ರೂಪಿಸಿರುವ ವ್ಯಕ್ತಿಗಳಿಗೆ ನಾನು ಹೇಳ ಬಯಸುವುದು ಇಷ್ಟೇ. ನಿಜವಾಗಿಯೂ ಹೆಣ್ಣು ಮಕ್ಕಳ ಬಗ್ಗೆ ನಿಮಗೆ ಕಾಳಜಿ ಇದ್ದರೆ ನೀವು ಒಂದು ಪ್ಯಾಕ್ಟರಿ ತೆರೆದು, ನಾಲ್ಕಾರು ಜನರಿಗೆ ಕೆಲಸ ನೀಡಿ, ಅದನ್ನು ಬಿಟ್ಟು, ಮನೆ ಬಾಗಿಲಿನಲ್ಲಿಯೇ ಕೆಲಸ ಮಾಡುತ್ತಾ ಬದುಕು ಕಂಡುಕೊಳ್ಳುತ್ತಿರುವ ಮಹಿಳೆಯರನ್ನು ದಾರಿ ತಪಿಸುವ ಕೆಲಸ ಮಾಡಬೇಡಿ ಎಂದು ಪಾಲನೇತ್ರಯ್ಯ ತಿಳಿಸಿದರು.
