ಆರ್ಎಂಸಿ ಯಾರ್ಡ್ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ.ಕೊಲೆ ಶಂಕೆ.

ಪಾವಗಡ:ಪಟ್ಟಣದ ಆರ್ಎಂಸಿ ಯಾರ್ಡ್ನಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರತಿ ಸೋಮವಾರ ನಡೆಯುವ ತರಕಾರಿ ಹಾಗೂ ಕುರಿ ಸಂತೆಗೆ ಬಂದ ಜನರು ಶವವನ್ನು ಕಂಡು ಬೆಚ್ಚಿಬಿದ್ದು ತಕ್ಷಣ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಶವವು ಸುಮಾರು ಎರಡು–ಮೂರು ದಿನಗಳ ಹಿಂದೆ ಮೃತಪಟ್ಟಿರುವಂತೆ ಶಂಕಿಸಲಾಗಿದ್ದು, ಮೃತನ ಕುತ್ತಿಗೆ ಭಾಗದಲ್ಲಿ ಬಲವಾದ ಪೆಟ್ಟು ಬಿದ್ದಿರುವ ಗುರುತುಗಳು ಕಂಡುಬರುತ್ತಿವೆ. ಇದರಿಂದ ಯಾರೋ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಎಸೆದು ಹೋಗಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶವ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.
ಆರ್ಎಂಸಿ ಯಾರ್ಡ್ ಸುಮಾರು 40.50 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರತಿ ಸೋಮವಾರ ತರಕಾರಿ ಸಂತೆ ಹಾಗೂ ಜಿಲ್ಲೆಯಲ್ಲಿ ಅತಿದೊಡ್ಡ ಕುರಿ ಸಂತೆ ನಡೆಯುವ ಪ್ರಮುಖ ಕೇಂದ್ರವಾಗಿದೆ. ಆದರೆ, ಈ ಪ್ರದೇಶವನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಬಳಕೆಗೆ ತರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ, ಸಂಜೆ ಸಮಯದಲ್ಲಿ ವಿವಿಧ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎನ್ನಲಾಗುತ್ತಿದೆ.
ಇದಲ್ಲದೆ, ಸಂಜೆ ವೇಳೆಗೆ ಕೆಲ ನಾಗರಿಕರು ವಾಯುವಿಹಾರಕ್ಕೆ ಬರುವ ಸ್ಥಳವೂ ಇದಾಗಿದೆ. ಸಂತೆಯ ಪಕ್ಕದಲ್ಲಿಯೇ ಅಗ್ನಿಶಾಮಕ ದಳದ ಕಚೇರಿ ಹಾಗೂ ವಸತಿ ಮನೆಗಳು ಇರುವುದರಿಂದ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಕುರಿ ಸಂತೆಗೆ ವ್ಯಾಪಾರಸ್ಥರು ಹಾಗೂ ರೈತರು ಆಗಮಿಸುವ ಈ ಪ್ರದೇಶದಲ್ಲಿ, ಸಂಜೆ ಆದ ಕೂಡಲೇ ಮದ್ಯಪಾನ ಹಾಗೂ ಇತರೆ ಅಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಈ ಭಾಗದ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
